೧೯೯೧ರ ಪಂಜಾಬ್ ನರಮೇಧವು ೧೫ಜೂನ್೧೯೯೧ರಂದು ಪಂಜಾಬಿನ ಲುಧಿಯಾನ ಜಿಲ್ಲೆಯಲ್ಲಿ ನಡೆದ ನರಮೇಧ. ಇದರಲ್ಲಿ ಸಿಖ್ ಉಗ್ರಗಾಮಿಗಳು ೮೦ರಿಂದ ೧೨೬ ಜನ ರೈಲು ಪ್ರಯಾಣಿಕರನ್ನು ಹತ್ಯೆಗೈದರು. ಲುಧಿಯಾನಾ ನಗರದ ಸಮೀಪದಲ್ಲಿ ಎರಡು ರೈಲುಗಳಲ್ಲಿ ಈ ಹತ್ಯಾಕಾಂಡ ನಡೆಯಿತು. ರೈಲಿನ ತುರ್ತುಕೊಂಡಿಯನ್ನು ಎಳೆಯುವುದರ ಮೂಲಕ ಲುಧಿಯಾನ ರೈಲ್ವೇ ಸ್ಟೇಶನ್ನಿನ ಒಂದು ಕಿಲೋಮೀಟರ್ ಮೊದಲೇ ರೈಲನ್ನು ನಿಲ್ಲಿಸಿ ಉಗ್ರಗಾಮಿಗಳು ರೈಲಿನ ಒಳಗೆ ನುಗ್ಗಿ ಬಂದೂಕಿನಿಂದ ಗುಂಡುಗಳನ್ನು ಹೊಡೆದು ಸುಮಾರು ೮೦ ಜನರನ್ನು ಕೊಲೆಮಾಡಿದರು. ಬದುಕಿ ಉಳಿದವರ ಪ್ರಕಾರ ಒಂದು ರೈಲಿನಲ್ಲಿ ಹಿಂದೂ ಪ್ರಯಾಣಿಕರನ್ನು ಬೇರ್ಪಡಿಸಿ ಅವರನ್ನು ಹತ್ಯೆಗೈಯಲಾಯಿತು. ಉಗ್ರಗಾಮಿಗಳು ಇಡೀ ರೈಲಿನಲ್ಲಿ ಹಿಂದೂಗಳನ್ನು ಹುಡುಕಿ ಬೇರ್ಪಡಿಸಿ ಸಿಖ್ಖರನ್ನು ಬಿಟ್ಟು ಹಿಂದೂಗಳನ್ನು ಕೊಂದರು. ಮತ್ತೊಂದು ರೈಲಿನಲ್ಲಿ ಒಟ್ಟಾರೆ ಎಲ್ಲಾ ಪ್ರಯಾಣಿಕರ ಮೇಲೆ ಮನಬಂದಂತೆ ಗುಂಡುಹಾರಿಸಿದರು. ಇದೆಲ್ಲಾ ಆಗಿ ಉಗ್ರರು ಹೊರಟುಹೋದನಂತರ ರೈಲನ್ನು ಬದ್ದುವಾಲ್ ಸ್ಟೇಶನ್ನಿಗೆ ಹಿಂದಕ್ಕೆ ತರಲಾಯಿತು. ಅಲ್ಲಿ ಸಹಾಯ ಮತ್ತು ವೈದ್ಯೋಪಚಾರ ಕೊಡಲಾಯಿತು. ಸಂತ್ರಸ್ಥರಿಗೆ ನೀರು, ಆಹಾರ, ಔಷದೋಪಚಾರ ಮತ್ತು ನೈತಿಕ ಸ್ಥೈರ್ಯ ಕೊಡುವ ಮೂಲಕ ಸ್ಥಳೀಯ ಹಳ್ಳಿಗರು ನೆರವಾದರು. ೧೯೯೧ರ ಏಪ್ರಿಲ್ ನಡುವಿನಲ್ಲಿ ಚುನಾವಣೆ ಘೋಷಣೆಯಾದಾಗಿನಿಂದ ಜೂನ್ ತಿಂಗಳಲ್ಲಿ ಈ ಘಟನೆ ನಡೆಯುವವರೆಗೆ ಪಂಜಾಬಿನಲ್ಲಿ ಸುಮಾರು ೭೦೦ ಜನ ಬಲಿಯಾದರು. ಅನಂತರ ಅದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಉಗ್ರಗಾಮಿಗಳು ೪೯ ಜನ ಪ್ರಯಾಣಿಕರನ್ನು ಕೊಲೆಮಾಡಿದರು. ಅವರಲ್ಲಿ ಹೆಚ್ಚಿನ ಜನ ಲುಧಿಯಾನಾದಿಂದ ಫಿರೋಜ್‍ಪುರಕ್ಕೆ ರೈಲಿನಲ್ಲಿ ತೆರಳುತ್ತಿದ್ದ ಹಿಂದೂಗಳಾಗಿದ್ದರು. == ಉಲ್ಲೇಖಗಳು == == ಇವನ್ನೂ ನೋಡಿ == ೧೯೮೭ರ ಪಂಜಾಬ್ ನರಮೇಧ